ವೈದ್ಯರು ಕೊಟ್ಟ ಮದ್ದಿನಿಂದ ಎದ್ದು ಕುಳಿತ ಅಧಿಕಾರಿಗಳು ; ಶರಾಬಿ ಹೊಳೆಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾದ ಸಣ್ಣ ನಿರಾವರಿ ಇಲಾಖೆ ಅಧಿಕಾರಿ

Source: SOnews | By Staff Correspondent | Published on 7th July 2023, 10:19 PM | Coastal News |

ಶರಾಬಿ ಹೊಳೆಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾದ ಸಣ್ಣ ನಿರಾವರಿ ಇಲಾಖೆ ಅಧಿಕಾರಿ

ಭಟ್ಕಳ: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಜನರ ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿ ಎಂದು ನೀಡಿದ ಖಡಕ್ ಸಂದೇಶ (ಮದ್ದು) ಕೆಲಸ ಮಾಡಿದಂತೆ ತೋರುತ್ತಿದ್ದು ನಿದ್ದೆಯಿಂದ ಎಚ್ಚರಗೊಂಡ ಸಣ್ಣನಿರಾವರಿ ಇಲಾಖೆಯ ಇಂಜಿನೀಯರ್ ರಜನಿ ತಿಲೇಕರ್ ಇನ್ಸ್ಪೆಕ್ಟರ್ ಲೋಕೇಶ್ ರೊಂದಿಗೆ ಶರಾಬಿ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಟ್ಕಳದ ಹೃದಯಭಾಗದಲ್ಲಿರುವ ಶರಾಬಿ ನದಿ ಹಲವು ಸಮಸ್ಯೆಗಳಿಗೆ ಮೂಲವಾಗಿದ್ದು ಇಲ್ಲಿನ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರು, ಸಾಮಾಜಿಕ ಹೋರಾಟಗಾರರು ಹಾಗೂ ಪುರಸಭೆ ಸದಸ್ಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಅನ್ನದ ಇವರು ಸಚಿವ ವೈದ್ಯರು ನೀಡಿದ ಮದ್ದಿನಿಂದಾಗಿ ಎದ್ದು ಕುಳಿತುಕೊಂಡಿದ್ದಾರೆ.

ಶುಕ್ರವಾರ ಭಟ್ಕಳ ಶರಾಬಿ ನದಿ ತೀರಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸ್ಥಳೀಯ ಪುರಸಭೆ ಸದಸ್ಯರೊಂದಿಗೆ ಹಾಗೂ ನಿವಾಸಿಗಳೊಂದಿಗೆ ಸಂವಾದ ನಡೆಸಿ ನದಿಯ ಸ್ವಚ್ಛತೆ ಮತ್ತು ಪಿಚಿಂಗ್ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಶರಾಬಿ ನದಿಯ ಒಂದು ಬದಿಯಲ್ಲಿ ಮಾತ್ರ ಪಿಚಿಂಗ್ ಮಾಡಲಾಗಿದೆ. ಆದರೆ ಮುಸ್ಲಿಂ ಜನನಿಬಿಡ ಪ್ರದೇಶದಲ್ಲಿ ಪಿಚಿಂಗ್ ವ್ಯವಸ್ಥೆ ಇರುವುದಿಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತಂದ ಸ್ಥಳಿಯರು, ಇದು ಇಡೀ ಪ್ರದೇಶವನ್ನು ಪ್ರವಾಹಕ್ಕೆ ಮತ್ತು ಮುಳುಗಡೆಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ನದಿಯನ್ನು ಸ್ವಚ್ಛಗೊಳಿಸುವ ಮತ್ತು ಆಳಗೊಳಿಸುವ ಮಹತ್ವವನ್ನು ಒತ್ತಿ ಹೇಳಿದ್ದು, ಕೂಡಲೇ ಜಿಲ್ಲಾಧಿಕಾರಿಗೆ ಸಮಗ್ರ ವರದಿ ಸಲ್ಲಿಸುವಂತೆ ಎಂಜಿನಿಯರ್‌ಗೆ ಒತ್ತಾಯಿಸಿದರು. ಇದಲ್ಲದೆ, ನದಿಗೆ ಕೊಳಚೆ ನೀರು ಬಿಡುವುದರಿಂದ ಅದು ಕಲುಷಿತವಾಗುತ್ತಿರುವ ಬಗ್ಗೆ  ಸಣ್ಣ ನಿರಾವರಿಯ ಇಲಾಖೆಯ ಎಂಜಿನಿಯರ್ ಗೆ ತಿಳಿಸಲಾಯಿತು. ಜನವಸತಿ ಪ್ರದೇಶದಿಂದ ತ್ಯಾಜ್ಯ ನೀರನ್ನು ಬೇರೆಡೆಗೆ ತಿರುಗಿಸಲು ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಲು ನಿವಾಸಿಗಳು ಸಲಹೆ ನೀಡಿದರು, ಆ ಮೂಲಕ ನದಿಯ ಸಮಗ್ರತೆಯನ್ನು ಕಾಪಾಡುವುದು ಮತ್ತು ಅದರ ದಡದಲ್ಲಿ ವಾಸಿಸುವ ಜನರ ಮೇಲೆ ಯಾವುದೇ ದುಷ್ಪರಿಣಾಮಗಳನ್ನು ಬೀರದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.

ಭೇಟಿ ವೇಳೆ ಸಾಮಾಜಿಕ ಸಂಘಟನೆ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅತೀಕುರ್ ರೆಹಮಾನ್ ಮುನಿರಿ, ಪುರಸಭೆ ಸದಸ್ಯರಾದ ಕೈಸರ್ ಮೊಹ್ತೆಶಮ್, ಫಯಾಜ್ ಮುಲ್ಲಾ, ಮಾಜಿ ಸದಸ್ಯ ಅಶ್ಫಾಕ್ ಕೆ.ಎಂ., ಅಝಿಝುರ್ ರಹಮಾನ್ ರುಕ್ನುದ್ದೀನ್ ನದ್ವಿ, ಜಿಲಾನಿ ಶಾಬಂದ್ರಿ, ಮೊಹಿಯುದ್ದೀನ್ ರುಕ್ನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

ಗುರುವಾರ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಅವರು ಅತಿವೃಷ್ಟಿಯಿಂದ ಆಗಿರುವ ಹಾನಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ್ದು ಸಭೆಯಲ್ಲಿ ಸ್ಥಳೀಯ ಪುರಸಭಾ ಸದಸ್ಯ ಕೈಸರ್ ಮೊಹ್ತೆಶಮ್ ಮತ್ತು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು ಶರಾಬಿ ನದಿಯನ್ನು ಸ್ವಚ್ಛಗೊಳಿಸುವ ಮತ್ತು ಅದರ ದಡದಲ್ಲಿ ಪಿಚ್ ಮಾಡುವ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸ್ಥಳೀಯ ನಿವಾಸಿಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಶರಾಬಿ ನದಿಗೆ ಭೇಟಿ ನೀಡಿ ವಿವರವಾದ ವರದಿ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

Read These Next

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ" ಅಭಿಯಾನ : ಈಶ್ವರ ಕಾಂದೂ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಎಲ್ಲ ಗ್ರಾಮ ...

ಉತ್ತರ ಕನ್ನಡದಲ್ಲಿ ಆಸ್ತಿಗಳ ನೋಂದಣಿಗೆ ಇ-ಆಸ್ತಿ ಮತ್ತು ಕಾವೇರಿ ತಂತ್ರಾಂಶದ ಸಂಯೋಜನೆ: ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ

ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ...