ಅಧಿಕಾರಿಯ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ
ಕಸ ಎಸೆಯವವರಿಗೆ ಇದು ಎಚ್ಚರಿಕೆಯ ಗಂಟೆ
ಭಟ್ಕಳ: ಭಟ್ಕಳದ ರಾಷ್ಟ್ರಿಯ ಹೆದ್ದಾರಿಯಲ್ಲಿ ಕದ್ದು ಮುಚ್ಚಿ ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನಿಂದಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿಸಿದ ಘಟನೆ ಶನಿವಾರ ಜಾಲಿ ಪ.ಪಂ ವ್ಯಾಪ್ತಿಯ ರಾ.ಹೆ.66 ಹೊಟೇಲ್ ಯಮ್ಮೀಸ್ ಬಳಿ ನಡೆದಿದ್ದು ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಜಾಲಿ ಪಟ್ಟಣ ಪಂಚಾಯತ್ ಆರೋಗ್ಯಾಧಿಕಾರಿ ವಿನಾಯಕ ಇವರ ಸಮಯ ಪ್ರಜ್ಞೆಯಿಂದ ಕಸ ಎಸೆದ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಆತನಿಂದಲೇ ಕಸವನ್ನು ಸ್ವಚ್ಚಗೊಳಿಸಿದ್ದಾರೆ. ಆರೋಗ್ಯಾಧಿಕಾರಿಯ ಈ ಕ್ರಮ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದ್ದರೆ ಕಸ ಎಸೆಯುವವರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.
ಕಳೆದ ಹಲವಾರು ದಿನಗಳಿಂದ ಹೆದ್ದಾರಿಯಲ್ಲಿ ಕಸದ ರಾಶಿ ಬಂದು ಬೀಳತೊಡಗಿದ್ದು, ಎಚ್ಚರಿಕೆ ನೀಡಿದ ಹೊರತಾಗಿಯೂ ಕದ್ದು ಮುಚ್ಚಿ ಜನರು ಕಸ ಎಸೆದು ಹೋಗುತ್ತಿದ್ದರು. ಪ್ರತಿನಿತ್ಯ ಈ ಪ್ರದೇಶದಲ್ಲಿ ಕಸ ಸಂಗ್ರಹವಾಗುತ್ತಿರುವುದನ್ನು ಆರೋಗ್ಯಾಧಿಕಾರಿ ವಿನಾಯಕ್ ಗಮನಿಸುತ್ತಿದ್ದರು. ಶನಿವಾರ ವ್ಯಕ್ತಿಯೊಬ್ಬರು ಕಸ ಎಸೆದು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳಿಯ ನಾಗರಿಕರು ತಕ್ಷಣ ಜಾಲಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಆರೋಗ್ಯಾಧಿಕಾರಿ ವಿನಾಯಕ್, ಕಸ ಎಸೆದ ವ್ಯಕ್ತಿಯನ್ನು ತಡೆದು ಆತನಿಂದಲೇ ಅಲ್ಲಿ ಬಿದ್ದುಕೊಂಡಿದ್ದ ಎಲ್ಲ ಕಸವನ್ನು ಸ್ವಚ್ಚಗೊಳಿಸಿದ್ದಾರೆ. ಇಡೀ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಗ್ಯ ಅಧಿಕಾರಿ ವಿನಾಯಕ್ ಅವರ ಪೂರ್ವಭಾವಿ ವಿಧಾನವು ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ದೂರವಾಣಿ ಮೂಲಕ ಮಾತನಾಡಿದ ವಿನಾಯಕ್, ಈ ಪ್ರದೇಶದಲ್ಲಿ ಕಸ ಹಾಕುವುದನ್ನು ತಡೆಯುವ ತಮ್ಮ ನಿರಂತರ ಪ್ರಯತ್ನಗಳನ್ನು ಹಂಚಿಕೊಂಡರು. "ನಾನು ಹಲವಾರು ದಿನಗಳಿಂದ ಈ ಸ್ಥಳವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಇಂದು, ಸ್ಥಳೀಯರ ಸಹಾಯದಿಂದ, ಕಸ ಎಸೆಯುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಾಧ್ಯವಾಗಿದೆ. ಹೀಗೆ ಪ್ರತಿದಿನ ಮೇಲ್ವಿಚಾರಣೆ ಮಾಡಲಾಗುವುದು. ಈ ರೀತಿಯಾದರೂ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಮಹತ್ವ ಮತ್ತು ಈ ಗುರಿಯನ್ನು ಸಾಧಿಸುವಲ್ಲಿ ಸಮುದಾಯದ ಸಹಕಾರದ ಪಾತ್ರದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.