ಶಿಕ್ಷಣ ಮತ್ತು ತರಬೇತಿಯು ಅಜ್ಞಾನಜನ್ಯ ಸಮಾಜವನ್ನು ಇಡೀ ಜಗತ್ತಿಗೆ ಒಂದು ಮಾದರಿ ಸಮಾಜವನ್ನಾಗಿ ಮಾಡಿತು-ಮೌಲಾನ ಸಜ್ಜಾದ್ ನೊಮಾನಿ

Source: SOnews | By Staff Correspondent | Published on 16th July 2024, 8:21 PM | Coastal News |

 

ಭಟ್ಕಳ: ಅಜ್ಞಾನ ಅಂಧಕಾರಗಳಿಂದ ಕೂಡಿದ್ದ ಒಂದು ಸಮಾಜವನ್ನು ತಮ್ಮ ಉತ್ತಮ ಶಿಕ್ಷಣ ಮತ್ತು ತರಬೇತಿಯಿಂದಾಗಿ ಪ್ರವಾದಿ ಮುಹಮ್ಮದ್ (ಸ)ರು ಜಗತ್ತಿಗೆ ಒಂದು ಮಾದರಿ ಸಮಾಜವನ್ನಾಗಿ ರೂಪಿಸಿ ತೋರಿಸಿದ್ದಾರೆ ಎಂದು ಖ್ಯಾತ ಇಸ್ಲಾಮಿ ವಿದ್ವಾಂಸ ಅಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದರ ಮಾಜಿ ವಕ್ತಾರ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೋಮಾನಿ ಹೇಳಿದರು.

ಅವರು ಮಂಗಳವಾರ ಭಟ್ಕಳದ ರಾಬಿತಾ ಸೂಸೈಟಿ ಆಯೋಜಿಸಿದ್ದ “ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದ ಮೊದಲ ಅಧಿವೇಶನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪಾಠಗಳನ್ನು ಮಾಡಲಾಗುತ್ತಿದೆ ಕಲಿಸಲಾಗುತ್ತಿಲ್ಲ. ಓದುವುದರಲ್ಲಿ ಮತ್ತು ಕಲಿಯುವುದರಲ್ಲಿ ಬಹಳ ವ್ಯತ್ಯಾಸ ಇದೆ. ನಮ್ಮ ಪೂರ್ವಜರು ಓದು ಬರಹದಿಂದ ದೂರವಿದ್ದರು. ಆದರೆ ಅವರು ಯಾವುದೇ ವಿದ್ವಾಂಸರಿಗಿಂತ ಕಡಿಮೆ ಇರಲಿಲ್ಲ. ಇಂದು ಓದು ಎಂಬುದರ ಅರ್ಥ ಬದಲಾಗಿದೆ. ಪ್ರಸ್ತುತ ಓದು ಬರೆಹ ಬಲ್ಲವರು ಹಾಗೂ ಶಿಕ್ಷಣ ಪಡೆದವರ ಸಂಖ್ಯೆ ಮಾನವ ಇತಿಹಾಸದಲ್ಲೇ ಇಷ್ಟೊಂದು ಹೆಚ್ಚು ಇರಲಿಲ್ಲ. ಆದರೆ ಈಗಿರುವಷ್ಟು ಒದು ಬರಹ ಬಲ್ಲ ಶಿಕ್ಷಿತ ಅಜ್ಞಾನಿಗಳೂ ಮಾನವ ಇತಿಹಾಸದಲ್ಲಿ ಎಂದೂ ಕೂಡ ಕಾಣಲಿಲ್ಲ ಎಂದರು. ಕೋಟ್ಯಾಂತರ ರೂಪಾಯಿಗಳ ಭ್ರಷ್ಟಚಾರವನ್ನು ನಡೆಸುತ್ತಿರುವವರು ಅಶಿಕ್ಷಿಕತರಲ್ಲ. ಬದಲಾಗಿ ಶಿಕ್ಷಣವಂತ ಅಜ್ಞಾನಿಗಳೇ ಆಗಿದ್ದಾರೆ. ಹೊಸ ಹೊಸ ಸ್ಕ್ಯಾಂಗಳನ್ನು ಮಾಡುವವರೂ ಶಿಕ್ಷಣ ಪಡೆದವರೆ ಆಗಿದ್ದಾರೆ. ಯಾರು ತನ್ನಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡಿದ್ದಾರೋ ಅವರೇ ನಿಜವಾಗಿ ಶಿಕ್ಷಣವಂತರಾಗಿದ್ದಾರೆ ಎಂದರು.

ದೇಶದ ಎಂಬತ್ತುಕೋಟಿ ಮನುಷ್ಯರು ೫ಕೆ.ಜಿ ಅಕ್ಕಿಯ ಆಸರೆಯಲ್ಲಿ ಬದುಕುತ್ತಿದ್ದಾರೆ. ನಮ್ಮ ಯುವಕರು ಮಾಹಿತಿ ತಂತ್ರಜ್ಞಾನದ ಜಾಲದೊಳಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ  ನಾವು ವಿಶ್ವಗುರು ಎಂದು ಹೇಳಿಕೊಳ್ಳುತ್ತಿದ್ದೇವೆ ನಮಗೆ ನಾಚಿಕೆಯಾಗಬೇಡವೇ? ಎಂದು ಅವರು  ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ ಮಾತನಾಡಿದರು.

ರಾಬಿತಾ ಸೂಸೈಟಿಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ್ರಹ್ಮಾನ್ ಮುನಿರಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಯುನೂಸ್ ಕಾಝಿಯಾ, ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಹುಸೇನ್ ಜುಕಾಕೋ, ಜಾಮಿಯ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೌಲಾನ ತಲ್ಹಾ ನದ್ವಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ,  ಭಟ್ಕಳ ಮುಸ್ಲಿಮ್ ಜಮಾಅತ್ ದುಬೈ ಇದರ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಮ್ ಉಪಸ್ಥಿತರಿದ್ದರು. ಮಹಿಳಾ ವೇದಿಕೆಯಲ್ಲಿ ನ್ಯೂ ಶಮ್ಸ್ ಸ್ಕೂಲ್ ನ ಫಹಮಿದಾ ಖಿಜರ್ ಹಾಗೂ ರೋಷನ್ ಮಾಲಿಕಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನಿಸಿದರು. ತನ್ವಿರ್ ಜುಷದಿ ನದ್ವಿ, ಅಥರ್ ಪಿರ್ಝಾದೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೩೫  ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಗೌರವಿಸಲಾಯಿತು.

ಸಮಾರೋಪ ಸಮಾರಂಭ ಮುಂದೂಡಿಕೆ: ಮಂಗಳವಾರ ಸಂಜೆ ನಡೆಯಬೇಕಾಗಿದ್ದ ರಾಬಿತಾ ಪ್ರಶಸ್ತಿ ಪ್ರಧಾನ ಸಮಾರಂಭದ ಸಮಾರೋಪ ಕಾರ್ಯಕ್ರಮವು ಮಳೆಯಿಂದಾಗಿ ಜು.೧೭ರಂದು ಸಂಜೆ ೪.೩೦ಕ್ಕೆ ನಡೆಯಲಿದೆ. ಮಂಗಳವಾರ ೪ ಗಂಟೆ ಸುಮಾರು ಅಕಸ್ಮಿಕವಾಗಿ ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಸಮಾರಂಭದ ವೇದಿಕೆಗೆ ಹಾಕಲಾಗಿದ್ದ ಟಿನ್ ಹಾರಿ ಹೋಗಿದ್ದು ವಿದ್ಯುತ್ ಕಡಿತಗೊಂಡಿತ್ತು. ಇದರಿಂದಾಗಿ ಸಭಾಂಗಣ ಅಸ್ತವ್ಯಸ್ತವಾಯಿತು. ೪.೩೦ ಕ್ಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ೪ ಗಂಟೆಗೆ ಜೋರಾದ ಮಳೆಯು ಅವಾಂತರ ಸೃಷ್ಟಿಸಿತು. ದುರಾದೃಷ್ಟವಶಾತ್ ವೇದಿಕೆಯಲ್ಲಿ ಜನ ಯಾರು ಇರಲಿಲ್ಲ. ಆದ್ದರಿಂದ ಯಾವುದೇ ಅನಾಹುತ ನಡೆಯಲಿಲ್ಲ ಎಂದು ಸಂಘಟಕರು ಮಾಹಿತಿ ನೀಡಿದ್ದು. ಜು. ೧೭ ರಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಮಾಜಿ ವಕ್ತಾರ ಮೌಲಾನ ಸಜ್ಜಾದ್ ನೋಮಾನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬೆಸ್ ಸ್ಕೂಲ್, ಬೆಸ್ಟ್ ಟೀಚರ್ ಅವಾರ್ಡ ನೀಡಲಾಗುವುದು.

Read These Next

ಕರಾಟೆ ಪಟು ದಿ.ಕಾಶಿಫ್ ಸ್ಮರಣಾರ್ಥ; ಅ.20 ರಂದು ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿಯಿಂದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್

ಭಟ್ಕಳ: ಆಝಾದ್ ನಗರದ ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ (AKFA), ಸಂಸ್ಥೆಯು ಕರಾಟೆ ಪಟು ದಿ.ಕಾಶಿಫ್ ರುಕ್ನುದ್ದೀನ ಸ್ಮರಣಾರ್ಥ ಅ.20 ...

16 ವರ್ಷದ ಮಕ್ಕಳಲ್ಲಿ ಪ್ರತಿರಕ್ಷಣಾತ್ಮಕ ಶಕ್ತಿ ವೃದ್ಧಿಸಲು ಭಟ್ಕಳದಲ್ಲಿ ಮಕ್ಕಳ ಲಸಿಕೆ ಅಭಿಯಾನಕ್ಕೆ ಚಾಲನೆ

ಭಟ್ಕಳ: ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಮಹತ್ವದ ಪ್ರಯತ್ನದಲ್ಲಿ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಭಟ್ಕಳದ ...

ಕಾರವಾರ: ಫೇಶಿಯಲ್ ರೆಕಗ್ನೇಶನ್ ಹಾಜರಾತಿ ರಾಜ್ಯಾದ್ಯಂತ ಜಾರಿಗೆ ಚಿಂತನೆ ; ರಿತೇಶ್ ಕುಮಾರ್ ಸಿಂಗ್

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಮೊಬೈಲ್‌ನಲ್ಲಿ ಫೇಶಿಯಲ್ ರೆಕಗ್ನೇಶನ್ ಮೂಲಕ ...