ಭಟ್ಕಳ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವ ರಸ್ತೆಯ ನಡುವೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಜನತಾ ಕ್ರೆಡಿಟ್ ಕೋ-ಆಪರೇಟಿವ್ ಸೂಸೈಟಿಯ ನಿವೃತ್ತ ಉದ್ಯೋಗಿ ಮಾರೂತಿ ದೇವಾಡಿಗ(೬೨) ಎಂದು ಗುರುತಿಸಲಾಗಿದೆ.
ಗಣೇಶನ ಮೂರ್ತಿಯನ್ನು ಚೌತನಿ ಬಳಿಯ ನದಿಯಲ್ಲಿ ವಿಸರ್ಜನೆ ಮಾಡಲು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿದ್ದ ಬಹುಪಾಲು ಜನರು ಕಿವಿಗಪ್ಪಳಿಸುವ ಡಿಜೆ ಸೌಂಡಿಗೆ ಹೆಜ್ಜೆ ಹಾಕುತ್ತಿದ್ದರು ಎನ್ನಲಾಗಿದ್ದು ಗಣೇಶನ ಮೆರವಣಿಗೆ ಹೂವಿನಪೇಟೆ ಬಳಿ ತಲುಪಿದಾಗ, ಮಾರುತಿ ದೇವಾಡಿಗ (62) ಎಂಬವರು ಹಠಾತ್ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರ ಮೃತ್ಯು ಸಂಭವಿಸಿರುವುದಾಗಿ ದೃಢಪಡಿಸಲಾಯಿತು.
ಗಣೇಶನ ಮೆರವಣಿಗೆಯಲ್ಲಿ ಸಕ್ರಿಯ ಮತ್ತು ಉತ್ಸಾಹದಿಂದ ಭಾಗವಹಿಸುತ್ತಿದ್ದ ಮಾರುತಿಯವರು ಪ್ರತೀ ವರ್ಷ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಗಣೇಶ ಪೆಂಡಾಲ ನಿರ್ವಹಿಸುತ್ತಿದ್ದರು.