ಹೊಸದಿಲ್ಲಿ: ವಿವಾದಾತ್ಮಕ ವಕ್ಫ್ ತಿದ್ದುಪಡಿ ವಿಧೇಯಕದ ಬಗ್ಗೆ ಕೇಂದ್ರದ ಆಡಳಿತಾರೂಢ ಬಿಜೆಪಿಯ ಪ್ರಮುಖ ಮಿತ್ರಪಕ್ಷಗಳಲ್ಲೊಂದಾದ ಜೆಡಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.
ಮುಸ್ಲಿಮರ ಹಿತಾಸಕ್ತಿಗಳ ರಕ್ಷಣೆಗಾಗಿ ಪ್ರಸ್ತಾವಿತ ವಕ್ಫ್ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವಿದೆಯೆಂದು ಜೆಡಿಯು ಪ್ರತಿಪಾದಿಸಿದೆ. ಈ ವಿಧೇಯಕಕ್ಕೆ ಜೆಡಿಯು ಆರಂಭಿಕ ಹಂತದಲ್ಲಿ ಬೆಂಬಲ ನೀಡಿತ್ತು. ಅಲ್ಲದೆ ಆ ಪಕ್ಷದ ಸಂಸದ ರಾಜೀವ್ರಂಜನ್ ಅವರು ಲೋಕಸಭೆಯಲ್ಲಿ ವಿಧೇಯಕದ ಕುರಿತಾಗಿ ನಡೆದ ಚರ್ಚೆಯಲ್ಲಿ ವಿಧೇಯಕವನ್ನು ಬೆಂಬಲಿಸಿ ಮಾತನಾಡಿದ್ದರು. ವಕ್ಫ್ ಇಲಾಖೆಯಲ್ಲಿ ಪಾರದರ್ಶಕತೆಯನ್ನು ತರಲು ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆಯೆಂದು ಅವರು ಹೇಳಿದ್ದರು.
ಆವಾಗಿನಿಂದಲೂ ಜೆಡಿಯುನಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಬಿಹಾರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಹಮ್ಮದ್ ಝಾಮಾ ಖಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ರನ್ನು ಭೇಟಿಯಾಗಿ ವಕ್ಫ್ ತಿದ್ದುಪಡಿ ವಿಧೇಯಕದಲ್ಲಿನ ಕೆಲವು ಸ್ಪೆಕ್ಷನ್ಗಳ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಖಾನ್ ಮಾತ್ರವಲ್ಲದೆ ಬಿಹಾರದ ಜಲಸಂಪನ್ಮೂಲ ಸಚಿವ ಹಾಗೂ ಸಿಎಂ ನಿತೀಶ್ ಕುಮಾರ್ ನಿಕಟವರ್ತಿ, ವಿಜಯ ಕುಮಾರ್ ಚೌಧುರಿ ಅವರೂ ವಿಧೇಯಕದ ಕುರಿತಾಗಿ ಮುಸ್ಲಿಮ್ ಸಮುದಾಯವು ಹೊಂದಿರುವ ಆತಂಕಗಳ ಬಗ್ಗೆ ಮಾತನಾಡಿದ್ದರು.
ಶಾಸಕ ಗುಲಾಮ್ ಗೌಸ್ ಸೇರಿದಂತೆ ಇತರ ಜೆಡಿಯು ನಾಯಕರು ಕೂಡಾ ವಿಧೇಯಕದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದರು.
ಜೆಡಿಯು ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಜಯ್ ಝಾ ಹಾಗೂ ಮುಹಮ್ಮದ್ ಝಾಮಾ ಖಾನ್ ಅವರು ಇತ್ತೀಚೆಗೆ ಕೇಂದ್ರ ಗೃಹ ಸಚಿವರ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ಪ್ರಸ್ತಾವಿತ ನೂತನ ವಿಧೇಯಕದ ಕೆಲವು ಸ್ಪೆಕ್ಷನ್ಗಳ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.