ಹೊನ್ನಾವರದ ಗೇರುಸೊಪ್ಪ ಹೆದ್ದಾರಿಯಲ್ಲಿ ಒಮ್ನಿ ವ್ಯಾನ್ ಮತ್ತು ಬಸ್ ನಡುವೆ ಡಿಕ್ಕಿ: ಭಟ್ಕಳದ ವ್ಯಕ್ತಿ ಸಾವು, ಪತ್ನಿಗೆ ಗಾಯ
ಭಟ್ಕಳ: ಹೊನ್ನಾವರ ತಾಲೂಕಿನ ಗೇರಸುಪ್ಪಾ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಮಾರುತಿ ಓಮ್ನಿ ವ್ಯಾನ್ ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು ಹಿಂಬದಿ ಸವಾರ ಮೃತನ ಪತ್ನಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಭಟ್ಕಳ ಮಖ್ದೂಮ್ ಕಾಲೋನಿ ನಿವಾಸಿ ಸೈಯದ್ ಅಬ್ದುಲ್ ವಾಜಿದ್ (40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅವರ ಪತ್ನಿ ಗುಲ್ಶನ್ ಅರಾ ಗಾಯಗೊಂಡಿದ್ದು, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ದುಬೈನಿಂದ ಸುಮಾರು 28 ದಿನಗಳ ಹಿಂದೆ ಭಟ್ಕಳಕ್ಕೆ ಮರಳಿದ ಅಬ್ದುಲ್ ವಾಜಿದ್ ಮುಂದಿನ ದಿನಗಳಲ್ಲಿ ದುಬೈಗೆ ಮರಳಲು ಯೋಜಿಸಿದ್ದರು. ಈತ ತನ್ನ ಸಹೋದರ ಸಹೋದರಿಯರನ್ನು ಭೇಟಿ ಮಾಡಲು ಪತ್ನಿಯೊಂದಿಗೆ ಗೇರುಸೊಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಅವರು ಪ್ರಯಾಣಿಸುತ್ತಿದ್ದ ಓಮ್ನಿ ವಾಹನವು ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಬ್ದುಲ್ ವಾಜಿದ್ ಮತ್ತು ಆತನ ಪತ್ನಿ ಗಾಯಗೊಂಡಿದ್ದಾರೆ. ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಬ್ದುಲ್ ವಾಜಿದ್ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಉಡುಪಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಗಿದೆ. ಆದರೆ, ಗಾಯಗೊಂಡಿದ್ದ ಅಬ್ದುಲ್ ವಾಜಿದ್ ಸಂಜೆ 6 ಗಂಟೆ ಸುಮಾರಿಗೆ ಉಡುಪಿ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತ ಅಬ್ದುಲ್ ವಾಜಿದ್ ಅವರು ಮೂವರು ಪುತ್ರರು ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡಿರುವ ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.