ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್
ಕೋಲ್ಕತಾ: ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಹಾಗೂ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿದ ಆರೋಪದಲ್ಲಿ ಇಬ್ಬರು ಪ್ರಮುಖ ವೈದ್ಯರು ಹಾಗೂ ಹಿರಿಯ ಬಿಜೆಪಿ ನಾಯಕರಿಗೆ ಕೋಲ್ಕತಾ ಪೊಲೀಸರು ರವಿವಾರ ಸಮನ್ಸ್ ಜಾರಿಗೊಳಿಸಿದ್ದಾರೆ.
ಕೋಲ್ಕತಾದ ಲಾಲ್ಬಝಾರ್ನಲ್ಲಿರುವ ಪೊಲೀಸ್ ಮುಖ್ಯ ಕಾರ್ಯಾಲಯಕ್ಕೆ ಹಾಜರಾಗಬೇಕೆಂದು ವೈದ್ಯರಾದ ಡಾ.ಕುನಾಲ್ ಸರ್ಕಾರ್, ಡಾ.ಸುಬರ್ಣಾ ಗೋಸ್ವಾಮಿ ಹಾಗೂ ಬಿಜೆಪಿ ನಾಯಕಿ ಮತ್ತು ಮಾಜಿ ಸಂಸದೆ ಲಾಕೆಟ್ ಚಟರ್ಜಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವೈದ್ಯರುಗಳಾದ ಡಾ. ಸರ್ಕಾರ್ ಹಾಗೂ ಡಾ.ಗೋಸ್ವಾಮಿ ಅವರು ಪ್ರಕರಣದ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆಂದು ಪೊಲೀಸರು ಆಪಾದಿಸಿದ್ದಾರೆ. ಸಂತ್ರಸ್ತೆಯ ದೇಹದಲ್ಲಿ 150 ಮಿ.ಗ್ರಾಂ ವೀರ್ಯಾಣು ಪತ್ತೆಯಾಗಿರುವುದು ಹಾಗೂ ಆಕೆಯ ಪೆಲ್ವಿಕ್ ಮೂಳೆಗಳು ಮುರಿದಿರುವುದು ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಸೂಚಿಸುತ್ತದೆ ಎಂದು ಸುಳಿವು ನೀಡುವ ಮೂಲಕ ಆಘಾತಕಾರಿ ಮಾಹಿತಿಗಳು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆಯೆಂದು ಡಾ. ಸುಬರ್ಣಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆನ್ನಲಾಗಿದೆ.
ಆದರೆ ಈ ಆರೋಪಗಳನ್ನು ಕೋಲ್ಕತಾ ಪೊಲೀಸರು ನಿರಾಕರಿಸಿದ್ದು, ಅವು ಆಧಾರರಹಿತ ಹಾಗೂ ಹಾನಿಕರವಾದ ವದಂತಿಗಳಾಗಿವೆ ಎಂದು ಹೇಳಿದ್ದಾರೆ.
ಈ ಮಧ್ಯೆ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪಕ್ಕೆ ಸಂಬಂಧಿಸಿ ಮಾಜಿ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರಿಗೆ ಕೋಲ್ಕತಾ ಪೊಲೀಸರು ಸಮನ್ಸ್ ನೀಡಿದ್ದಾರೆ. ಭಾರತೀಯ ಕಾನೂನಿನಡಿ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸುವುದು ಗಂಭೀರವಾದ ಅಪರಾಧವಾಗಿದೆ. ಸಂತ್ರಸ್ತೆ ಯ ಗುರುತುಬಹಿರಂಗದ ಜೊತೆ ಸುಳ್ಳು ಸುದ್ದಿಯನ್ನು ಹರಡುವುದು, ಈಗ ನಡೆಯುತ್ತಿರುವ ತನಿಖೆಯನ್ನು ಜಟಿಲಗೊಳಿಸಿದೆ ಎಂದರು.