ಕರಾಟೆ ಪಟು ದಿ.ಕಾಶಿಫ್ ಸ್ಮರಣಾರ್ಥ; ಅ.20 ರಂದು ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿಯಿಂದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್
ಭಟ್ಕಳ: ಆಝಾದ್ ನಗರದ ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ (AKFA), ಸಂಸ್ಥೆಯು ಕರಾಟೆ ಪಟು ದಿ.ಕಾಶಿಫ್ ರುಕ್ನುದ್ದೀನ ಸ್ಮರಣಾರ್ಥ ಅ.20 ರಂದು ಭಟ್ಕಳದ ಅಮೀನ ಪ್ಯಾಲೇಸ್ನಲ್ಲಿ ತನ್ನ ಮೊದಲ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ ಅನ್ನು ಆಯೋಜಿಸುತ್ತಿದೆ ಎಂದು ಸಂಘಟಕ ಅಮರ್ ಶಾಬಂದ್ರಿ ಮಾಹಿತಿ ನೀಡಿದರು.
ಅವರು ಬುಧವಾರ ಸಂಜೆ ಅಮಿನಾ ಪ್ಯಾಲೇಸ್ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಈ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ 5 ರಾಜ್ಯಗಳಿಂದ 600-800 ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 15 ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್ಗಳು ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಾರೆ. ಇದರೊಂದಿಗೆ, ಕರಾಟೆ ಇಂಡಿಯಾ ಆರ್ಗನೈಸೇಶನ್ (KIO) ನಿಂದ ಪ್ರಮಾಣಿತ 20 ಕ್ಕೂ ಹೆಚ್ಚು ರೆಫರಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ, ಗೌರವ ಅತಿಥಿಯಾಗಿ ಹಾಂಗ್ಯೋ ಐಸ್ ಕ್ರೀಮ್ ಪ್ರೈ ಲಿ. ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ಪುರಸಭಾ ಉಪಾಧ್ಯಕ್ಷ ಮುಹಿದ್ದೀನ್ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಾಫರ್ ಸಾದಿಖ್ ಶಾಬಂದ್ರಿ, ಭಟ್ಕಳ ಕಮ್ಯುನಿಟಿ ಜೆದ್ದಾ ಅದ್ಯಕ್ಷ ಖಮರ್ ಸಾದಾ, ಸಮಾಜ ಸೇವಕ ನಝೀರ್ ಕಾಶಿಮಜಿ, ಲೈಫ್ ಕೇರ್ ಆಸ್ಪತ್ರೆಯ ವ್ಯವಸ್ಥಾಪ ನಿದೇರ್ಶಕ ಸಲ್ಮಾನ್ ಆಹ್ಮದ್ ಜುಬಾಪು, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಮಾಜಿ ಅಧ್ಯಕ್ಷ ಅಝೀಝುರ್ರಹ್ಮಾನ್ ರುಕ್ನುದ್ದೀನ್, ರೋಟರಿ ಕ್ಲಬ್ ಅಧ್ಯಕ್ಷ ಇಷ್ತಿಯಾಕ್ ಹಸನ್, ಕರ್ನಾಟಕ ಕರಾಟೆ ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರ್ಗವ ರೆಡ್ಡಿ, ಅಡಳಿತಾತ್ಮಕ ಕಾರ್ಯದರ್ಶಿ ಕೀರ್ತಿ ಜಿ.ಕೆ ಭಾಗವಹಿಸಲಿದ್ದಾರೆ.
ಚಾಂಪಿಯನ್ಶಿಪ್ ಒಂದು ದಿನದ ಈವೆಂಟ್ ಆಗಿದ್ದು, ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗಿ, ಸಂಜೆ 7 ಗಂಟೆಗೆ ಸಮಾರೋಪಗೊಳ್ಳುತ್ತದೆ. 5 ವರ್ಷದಿಂದ ಹಿಡಿದು ಎಲ್ಲಾ ವಯೋಮಾನದ ಹುಡುಗರು ಮತ್ತು ಹುಡುಗಿಯರು "ಕಟಾ" ಮತ್ತು "ಕುಮಿಟೆ" ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.
ಚಿನ್ನದ ಪದಕ ವಿಜೇತರಿಗೆ ವಿಶೇಷ ಅವಕಾಶ: ಆಯಾ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವರು, "ಗ್ರ್ಯಾಂಡ್ ಚಾಂಪಿಯನ್ಶಿಪ್" ಈವೆಂಟ್ನಲ್ಲಿ ಪ್ರದರ್ಶನ ನೀಡಲು ಅವಕಾಶವನ್ನು ಪಡೆಯುತ್ತಾರೆ. ಈ ವಿಭಾಗದಲ್ಲಿ ವಿಜೇತರಿಗೆ 33 ಇಂಚು ಎತ್ತರದ ಟ್ರೋಫಿ ಮತ್ತು ರೂ. 5000 ನಗದು ಬಹುಮಾನ ನೀಡಲಾಗುತ್ತದೆ.
ಗ್ರ್ಯಾಂಡ್ ಚಾಂಪಿಯನ್ಶಿಪ್ ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿದೆ.14 ವರ್ಷದೊಳಗಿನ ಬಾಲಕರು 14 ವರ್ಷಕ್ಕಿಂತ ಮೇಲ್ಪಟ್ಟ ಬಾಲಕರು ಮತ್ತು ಮಹಿಳಾ ವಿಭಾಗ
ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ (AKFA)ವು ಕಳೆದ ಐದು ವರ್ಷಗಳಿಂದ ಈ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ. ಈ ಅಕಾಡೆಮಿಯು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕರಾಟೆ ಮತ್ತು ಫಿಟ್ನೆಸ್ ತರಬೇತಿಯನ್ನು ನೀಡಿದೆ, ಈ ತರಬೇತಿ ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಲಭ್ಯವಾಗಿದೆ. ಅಕಾಡೆಮಿಯು ತನ್ನ ತರಬೇತಿ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳಿಗೆ ಶಾರೀರಿಕ ಹಾಗೂ ಮಾನಸಿಕ ಬಲವನ್ನು ಹೆಚ್ಚಿಸುವಲ್ಲಿ ಮುಂದಾಗಿದೆ.
ಅಮರ್ ಶಾಬಂದ್ರಿ, ಅಮರಶಾ ಕರಾಟೆ ಅಕಾಡೆಮಿಯ ಸ್ಥಾಪಕ ಮತ್ತು ಮುಖ್ಯ ತರಬೇತುದಾರರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಏಕೈಕ ವಿಶ್ವ ಕರಾಟೆ ಫೆಡರೇಶನ್ (WKF) ಪ್ರಮಾಣಿತ ತರಬೇತುದಾರರಾಗಿದ್ದಾರೆ. ಅವರ ನೇತೃತ್ವದಲ್ಲಿ ಈ ಅಕಾಡೆಮಿಯು ಯುಎಇಯ ಫುಜೈರಾದಲ್ಲಿ 2024ರಲ್ಲಿ ನಡೆದ WKF ಯೂತ್ ಲೀಗ್ ಸ್ಪರ್ಧೆಗೆ ಭಾರತೀಯ ರಾಷ್ಟ್ರೀಯ ಕರಾಟೆ ತಂಡವನ್ನು ನೀಡುವ ಭಟ್ಕಳದ ಮತ್ತು ಉತ್ತರ ಕನ್ನಡದ ಮೊದಲ ಅಥ್ಲೀಟ್ನನ್ನು ತರಬೇತಿಸಿದ ಸಾಧನೆ ಮಾಡಿದೆ.
ಈ ಸಂದರ್ಭದಲ್ಲಿ
ಉತ್ತರಕನ್ನಡ ಜಿಲ್ಲಾ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರವಿಂದ್ ನಾಯ್ಕ, ಉಪಾಧ್ಯಕ್ಷ ಈಶ್ವರ್ ನಾಯ್ಕ, ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಾಫರ್ ಸಾದಿಕ್ ಶಾಬಂದ್ರಿ, ರೋಟರಿ ಕ್ಲಬ್ ಅಧ್ಯಕ್ಷ ಇಷ್ತಿಯಾಕ್ ಹಸನ್ ಕರಾಟೆ ಪಟು ಇಹಾಬ್ ರುಕ್ನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.