ಹೊಸದಿಲ್ಲಿ: ದಿಲ್ಲಿ ಸರಕಾರದ ಹಿಂದಿನ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹೂಡಿರುವ ಪ್ರಕರಣದಲ್ಲಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ರಿಗೆ ಜಾಮೀನು ನೀಡಿ ವಿಚಾರಣಾ ನ್ಯಾಯಾಲಯವು ತೀರ್ಪಿಗೆ ದಿಲ್ಲಿ ಹೈಕೋರ್ಟ್ ಮಂಗಳವಾರ ತಡೆ ಯಾಜ್ಞೆ ನೀಡಿದೆ.
ನೀಡಿರುವ ಕೇಜ್ರವಾಲ್ರಿಗೆ ಜಾಮೀನು ನೀಡುವ ಮುನ್ನ ವಿಚಾರಣಾ ನ್ಯಾಯಾಲಯವು ಸರಿಯಾಗಿ ಯೋಚನೆ ಮಾಡಿಲ್ಲ ಎಂದು ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರನ್ನೊಳಗೊಂಡ ರಜಾಕಾಲದ ಪೀಠವು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು.
ಜಾರಿ ನಿರ್ದೇಶನಾಲಯವು ಸಲ್ಲಿಸಿರುವ “ಅಗಾಧ ಪ್ರಮಾಣದ ದಾಖಲೆಗಳನ್ನು ಪರಿಗಣಿ ಸುವಂತಿಲ್ಲ ಎಂದು ವಿಚಾರಣಾ ನ್ಯಾಯಾಲ ಯದ ಅಭಿಪ್ರಾಯಕ್ಕೂ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು.
ಬೃಹತ್ ಗಾತ್ರದ ದಾಖಲೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಿಚಾರಣಾ ನ್ಯಾಯಾಲಯದ ಅನಿಸಿಕೆಯು ಸಂಪೂರ್ಣ ಅಸಮರ್ಥನೀಯವಾಗಿದೆ. ಇದು ದಾಖಲೆಯನ್ನು ನ್ಯಾಯಾಧೀಶರು ಪರಿಗಣಿಸಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹೈಕೋರ್ಟ್ ಹೇಳಿತು. ವಿಚಾರಣಾ ನ್ಯಾಯಾಲಯವು ಅನುಷ್ಠಾನ ನಿರ್ದೇಶನಾಲಯಕ್ಕೆ ತನ್ನವಾದವನ್ನು ಮಂಡಿಸಲು “ಸೂಕ್ತ ಅವಕಾಶ' ನೀಡಬೇಕಾಗಿತ್ತು ಎಂಬುದಾಗಿಯೂ ಹೈಕೋರ್ಟ್ ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್ಎಲ್)ಯ 45ನೇ ಪರಿಚ್ಛೇದದ ಎರಡು ಶರತ್ತುಗಳನ್ನು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಜಾರಿ ನಿರ್ದೇಶನಾಲಯದ ವಾದವನ್ನು ಹೈಕೋರ್ಟ್ ಪುರಸ್ಕರಿಸಿತು.
ಕೇಜ್ರವಾಲ್ರಿಗೆ ವಿಚಾರಣಾ ನ್ಯಾಯಾಲಯವು ಜೂನ್ 20ರಂದು ನಿಯಮಿತ ಜಾಮೀನು ನೀಡಿತ್ತು. ಆದರೆ, ಮಾರನೇ ದಿನ ದಿಲ್ಲಿ ಹೈಕೋರ್ಟ್ ಅವರ ಬಿಡುಗಡೆಗೆ ತಡೆಯಾಜ್ಞೆ ನೀಡಿತ್ತು. ದಿಲ್ಲಿ ಹೈಕೋರ್ಟ್ನ ಮಧ್ಯಂತರ ತಡೆಯನ್ನು ಪ್ರಶ್ನಿಸಿ ಕೇಜ್ರವಾಲ್ ಶನಿವಾರ ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಆದರೆ, ಈ ವಿಷಯದಲ್ಲಿ ದಿಲ್ಲಿ ಹೈಕೋರ್ಟ್ ತನ್ನ ತೀರ್ಪು ನೀಡುವವರೆಗೆ ಕಾದು ನೋಡಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿತ್ತು. ಈ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ನಡೆಯಲಿದೆ.