ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ ಮರಳು ಅಭಾವ ಉಂಟಾಗಲು ಬಿಜೆಪಿಯೇ ಕಾರಣವಾಗಿದ್ದು ವಿನಾಕಾರಣ ಸಚಿವ ಮಂಕಾಳ ವೈದ್ಯರ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡರು ಆರೋಪಿಸಿದ್ದಾರೆ.
ಸೋಮವಾರ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿದ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಹಾಗೂ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಜಿಲ್ಲೆಯ ಮರಳು ಸಮಸ್ಯೆಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿದರು.
ಈ ಕುರಿತು ಮಾತನಾಡಿದ ಮಂಕಿ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ, ಇಂದು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದರಲ್ಲಿ ಮರಳು ಸಮಸ್ಯೆ ಪ್ರಮುಖವಾಗಿದೆ. ಬಿಜೆಪಿಯವರು ಮರಳುಗಾರಿಕೆಗೆ ಸಂಬಂಧಿಸಿದಂತೆ ಚೆನ್ನೈ ನ ಹಸಿರು ಟ್ರುಬುನಲ್ ಗೆ ದೂರು ಸಲ್ಲಿಸಿದ್ದು ಆ ಕಾರಣಕ್ಕಾಗಿ ಇಲ್ಲಿನ ಮರಳು ಸಮಸ್ಯೆ ಉದ್ಭವಿಸಿದೆ. ಇದನ್ನು ಮರೆಮಾಚಿ ಕಂಡ ಕಂಡ ಕಡೆಗೆಲ್ಲ ಮರಳು ಸಮಸ್ಯೆಗೆ ಕಾಂಗ್ರೇಸ್ ಪಕ್ಷ ಹಾಗೂ ಶಾಸಕರು, ಸಚಿವರನ್ನು ಎಳೆದು ತಂದು ಅವರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಒಂದು ವೇಳೆ ಬಿಜೆಪಿಯವರು ಆ ಪ್ರಕರಣವನ್ನು ಹಿಂತೆಗೆದುಕೊಂಡರೆ ನಾಳೆಯೇ ಮರಳು ಜನರ ಕೈಗೆ ಸಿಗುವಂತೆ ನಮ್ಮ ನಾಯಕರು ಮಾಡುತ್ತಾರೆ ಎಂದರು. ಯಾರು ಮರಳುಗಾರಿಕೆ ಪಾಸ್ ಪಡೆಯಲು ಬಯಸಿ ಅರ್ಜಿ ಸಲ್ಲಿಸಿದ್ದಾರೋ ಅವರೇ ಮರಳುಗಾರಿಕೆ ತಡೆಯುವಂತೆ ಕೋರ್ಟಿಗೆ ಹೋಗಿದ್ದಾರೆ. ಈಗ ಪ್ರಕರಣ ಕೋರ್ಟಿನಲ್ಲಿರುವುದರಿಂದ ಮರಳು ಸಮಸ್ಯೆ ಉಲ್ಭಣಗೊಂಡಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ, ವಿಷ್ಣುದೇವಾಡಿಗ ಸೇರಿದಂತೆ ಹಲವು ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.