ಭಟ್ಕಳ: ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಮಹತ್ವದ ಪ್ರಯತ್ನದಲ್ಲಿ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಹಾಗೂ ರಾಬಿತಾ ಸೂಸೈಟಿ ಸಹಯೋಗದೊಂದಿಗೆ ಭಟ್ಕಳದಲ್ಲಿ ಮಕ್ಕಳ ಲಸಿಕೆ ಹೆಚ್ಚಿಸುವ ಅಭಿಯಾನಕ್ಕೆ ಬುಧವಾರ ರಾಬಿತಾ ಸಭಾಂಗಣದಲ್ಲಿ ಚಾಲನೆ ನೀಡಿದರು. ಈ ಆಭಿಯಾನದಲ್ಲಿ 0-16 ವರ್ಷದೊಳಗಿನ ಪ್ರತಿ ಮಗುವನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ ಹೇಳಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಸಿದ್ಧಲಿಂಗಯ್ಯ ಎಚ್.ಎಸ್., ಮಾತನಾಡಿ ಭಟ್ಕಳದಲ್ಲಿ ಮಕ್ಕಳ ಆರೋಗ್ಯ ಕುರಿತಂತೆ ಅತ್ಯಂತ ಜಾಗೃತಿ ವಹಿಸಬೇಕಾಗಿದೆ. ಇಲ್ಲಿ ಕಳೆದ ವರ್ಷ ಮಿಸೆಲ್ಸ್ ಕಾಯಿಲೆ ಉಲ್ಭಣಗೊಂಡಿರುವ ಕುರಿತು ಆರೋಗ್ಯ ಇಲಾಖೆ ವರದಿ ನೀಡಿದೆ. ಅಲ್ಲದೆ ಮಕ್ಕಳ ಲಸಿಕೆ ಕುರಿತು ಹಲವು ತಪ್ಪುಭಾವನೆಗಳಿದ್ದು ಅದನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಇಂದು ಪ್ರಾರಂಭವಾದ ಲಸಿಕಾ ಅಭಿಯನವು ಪೋಲಿಯೊ, ದಡಾರ, ರುಬೆಲ್ಲಾ, ಡಿಫ್ತೀರಿಯಾ ಮತ್ತು ಹೆಪಟೈಟಿಸ್ ಬಿ ಮುಂತಾದ ರೋಗಗಳನ್ನು ತಡೆಗಟ್ಟುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ. ಲಸಿಕೆಗಳನ್ನು ಪೋಷಕರಿಗೆ ಸುಲಭವಾಗಿ ತಲುಪಿಸಲು ಪ್ರಯತ್ನ ಮಾಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲದ ಮಕ್ಕಳನ್ನು ತಲುಪಲು ಆರೋಗ್ಯ ಕಾರ್ಯಕರ್ತರು ದೂರದ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಯುನಿಸೆಫ್ ಸಲಹೆಗಾರ ಮನೋಜ್ ಸೆಬಸ್ಟೈನ್ ಮಾತನಾಡಿ, ಸಮುದಾಯದ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳಾದ ತಂಝೀಮ್ ಮತ್ತು ರಾಬಿತಾ ಸಂಸ್ಥೆಗಳು ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದರು.
ಭಟ್ಕಳದ ಖ್ಯಾತ ಮಕ್ಕಳ ವೈದ್ಯ ಡಾ. ಜಮೀಲ್ ಗವಾಯಿ ಮಾತನಾಡಿ ಮಕ್ಕಳ ಲಸಿಕೆ ಕುರಿತಂತೆ ನಮ್ಮಲ್ಲಿನ ತಪ್ಪಕಲ್ಪನೆಗಳನ್ನು ದೂರ ಮಾಡಬೇಕಾದುದು ಅತಿ ಅವಶ್ಯಕವಾಗಿದ್ದು ಸಮುದಾಯದ ವಿವಿಧ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಚರಣೆಗಿಳಿದಿರುವುದು ತುಂಬಾ ಸಂತೋಷ ಎಂದರು.
ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮಾತ್ ಮಾತನಾಡಿ, ಭಟ್ಕಳದಲ್ಲಿ ಎಲ್ಲ ರೀತಿಯಿಂದಲೂ ಉತ್ತಮವಾಗಿದ್ದು ಇಲ್ಲಿನ ಮಹಿಳೆಯರು ಜಾಗರೂಕರಾಗಿದ್ದಾರೆ. ಹೆರಿಗೆ ಪೂರ್ವ ಗರ್ಭಪಾತ ಇಲ್ಲಿ ಆಗುವುದಿಲ್ಲ. ಆದರೆ ಮಕ್ಕಳ ಲಸಿಕೆ ಕುರಿತು ಇನ್ನೂ ಜಾಗೃತರಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಕ್ಕಳ ಆರೋಗ್ಯ ಕುರಿತು ಮಾತೆಯರು ಜಾಗೃತಿ ವಹಿಸುವಂತೆ ಕರೆ ನೀಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಿದ್ದಾ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಖಮರ್ ಸಾದಾ ಮಾತನಾಡಿದರು.
ತಂಝೀಮ್ ಸಂಸ್ಥೆಯ ಪದಾಧಿಕಾರಿ ಇಕ್ಬಾಲ್ ಜಾವೀದ್ ಕಾರ್ಯಕ್ರಮ ನಿರೂಪಿಸಿದರು.