ಕಾವೂರು: ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಸೇತುವೆಯ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ಅವರ ಮೃತದೇಹ ಸೋಮವಾರ ಬೆಳಗ್ಗೆ ಮೀನುಗಾರರ ದೋಣಿಗೆ ಪತ್ತೆಯಾಗಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಕೋಸ್ಟ್ ಗಾರ್ಡ್ ಸೇರಿ ಸ್ಥಳೀಯ ನಾಡದೋಣಿ ಮೀನುಗಾರರು ನಡೆಸಿದ ಶೋಧ ಕಾರ್ಯದಲ್ಲಿ ಕೊನೆಗೂ ಬೆಳಗ್ಗೆ 10:40ರ ಸಮಯದಲ್ಲಿ ಮೃತದೇಹ ಕಾಣಿಸಿತು.
ಮುಮ್ತಾಝ್ ಅಲಿ ಅವರನ್ನು ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿ ಹಣ ಪಡೆದು, ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಲ್ಲಿ ಒಬ್ಬ ಮಹಿಳೆ ಸೇರಿದಂತೆ 6 ಜನರ ವಿರುದ್ಧ ಈಗಾಗಲೇ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.