ಭಟ್ಕಳ: ಕೇಂದ್ರ ಸರ್ಕಾರದಿಂದ ಪ್ರಸ್ತಾವಿತ ನೂತನ ವಕ್ಫ್ ಬಿಲ್ ಮಸೂದೆಯನ್ನು ಕೂಡಲೆ ಹಿಂಪಡೆಯಬೇಕೆಂದು ಆಗ್ರಹಿಸಿ ಭಟ್ಕಳದ ಎಸ್.ಡಿ.ಪಿ.ಐ ಪಕ್ಷದಿಂದ ಪ್ರತಿಭಟನಾ ಮೆರವಣೆಗೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಸಂಸತ್ ಭವನ ನವದೆಹಲಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಫೀಖ್ ಬ್ಯಾರಿ, ಮುಸ್ಲಿಮರ ವಕ್ಫ್ ಆಸ್ತಿಯನ್ನು ನೋಡಿ ಕೇಂದ್ರದ ಕಣ್ಣು ಕೆಂಪಾಗಿದೆ. ಹೇಗಾದರೂ ಮಾಡಿ ಮುಸ್ಲಿಮರಿಂದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದೆ. ದೇಶದ ಮುಸ್ಲಿಮರು ಇದನ್ನು ನಡೆಯಲು ಬಿಡುವುದಿಲ್ಲ ಎಂದರು. ಮುಸ್ಲಿಮರ ಮತಗಳನ್ನು ಪಡೆದು ಸಂಸದರಾದವರು ಸಂಸತ್ತಿನಲ್ಲಿ ದ್ವನಿ ಎತ್ತಬೇಕು, ನಮ್ಮ ಮತಭಿಕ್ಷೆಯಿಂದಲೇ ನೀವು ಸಂಸತ್ ಸದಸ್ಯರಾಗಿದ್ದೀರಿ ಎನ್ನುವುದನ್ನು ಮರೆಯಬಾರದು. ಮುಸ್ಲಿಮರ ಸಮಸ್ಯೆಗಳನ್ನು ಕಡೆಗಣಿಸಿದ್ದೇ ಆದಲ್ಲಿ ನೀವು ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆತ್ತಬೇಕಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಉತ್ತರಕನ್ನಡ ಜಿಲ್ಲಾ ಕಾರ್ಯದರ್ಶಿ ಝೈನ್, ಭಟ್ಕಳ ಕ್ಷೇತ್ರಾಧ್ಯಕ್ಷ ಮಕ್ಬೂಲ್ ಶೇಖ್, ಉಪಾಧ್ಯಕ್ಷ ವಸೀಮ್ ಮನೆಗಾರ್ ಮತ್ತಿತರರು ಇದ್ದರು.