ಭಟ್ಕಳ : ಗುರುಕೃಪಾ ಸಹಕಾರಿ ಪತ್ತಿನ ಸಂಘವು 2023-24ನೇ ಸಾಲಿನಲ್ಲಿ 50 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘವು ಆರ್ಥಿಕವಾಗಿ ಪ್ರಗತ್ತಿಯತ್ತ ಮುನ್ನುಗ್ಗುತ್ತಿದೆ ಎಂದು ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು.
ಅವರು ಶನಿವಾರ ಪಟ್ಟಣದ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ವಾರ್ಷಿಕ ಷೇರುದಾರರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘವು 53.63 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಂಘದಲ್ಲಿ 44.40 ಲಕ್ಷ ಶೇರು ಬಂಡವಾಳ ಇದ್ದು, ಕಳೆದ ಸಾಲಿನಲ್ಲಿ ಸದಸ್ಯರಿಂದ 41.27 ಕೋಟಿ ಠೇವಣಿಯನ್ನು ಸಂಗ್ರಹಿಸಲಾಗಿದೆ. ಸಂಘವು ತನ್ನ ಸದಸ್ಯರಿಗೆ 41.97 ಕೋಟಿ ಸಾಲವನ್ನು ವಿತರಿಸಿದ್ದು, ವಸೂಲಿ ಪ್ರಮಾಣ ಶೇಕಡಾ 90 ರಷ್ಟಿದೆ ಎಂದರು. ಸಂಘವು ಕಳೆದ ಎರಡು ವರ್ಷಗಳಲ್ಲಿ ಮಹಿಳಾ ಸಂಘದ ಸದಸ್ಯರಿಗೆ 5.79 ಕೋಟಿ ಸಾಲ ವಿತರಿಸಿದ್ದು, ವಸೂಲಿ ಪ್ರಮಾಣ ಶೇಕಡಾ 100 ರಷ್ಟಿದೆ ಎಂದರು.
ಸಂಘದಲ್ಲಿ 4.85 ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ಸಂಘವು ಆರ್ಥಿಕವಾಗಿ ಸದೃಢವಾಗಿದೆ ಎಂದ ಅವರು ಸಂಘವು ಹೊಸದಾಗಿ ಆರಂಭ ಮಾಡಿದ್ದ ಮಂಕಿಯ ಚಿತ್ತಾರ ಹಾಗು ಸರ್ಪನಕಟ್ಟೆಯ ಶಾಖೆಯೂ ಈ ಬಾರಿ ಗ್ರಾಹಕರ ಸಹಕಾರದಿಂದ ಲಾಭದಲ್ಲಿ ಮುನ್ನೆಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಷೇರುದಾರ ಸದಸ್ಯರಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿ ಸಂಗದ ಅಭಿವೃದ್ದಿ ಸಹಕರಿಸುವಂತೆ ಕೋರಿಕೊಂಡರು.
ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ, ನಿರ್ದೇಶಕರಾದ ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಹರೀಶ ನಾಯ್ಕ, ಶಬರೀಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ಭಾರತಿ ನಾಯ್ಕ, ವಿಜಯ ನಾಯ್ಕ ಹಾಗು ಪ್ರಧಾನ ವ್ಯವಸ್ಥಾಪಕ ವಾಸು ನಾಯ್ಕ ಇದ್ದರು.