ಭಟ್ಕಳ: ಸಾರ್ವಜನಿಕರು ತಮಗೆ ಸೂಕ್ತ ಅನಿಸಿದ್ದಲ್ಲಿ ವರ್ಷಕ್ಕೆ ಒಂದು ಮರವನ್ನಾದರೂ ನೆಟ್ಟು ಅದನ್ನು ಬೆಳಸುವಂತೆ ಭಟ್ಕಳ ಹೊನ್ನಾವರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಪಿ.ಬಿ ಕರೆ ನೀಡಿದರು.
ಅವರು ಬುಧವಾರ ಇಲ್ಲಿನ ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಪಾರ್ಕಿನಲ್ಲಿ ಭಟ್ಕಳ ತಾಲೂಕು ಪತ್ರಕರ್ತರ ಸಹಯೋಗದೊಂದಿಗೆ ಆಯೋಜಿಸಿದ್ದ ವನಮೋಹತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ಜುಲೈ ತಿಂಗಳಲ್ಲಿ ವನ ಮಹೋತ್ಸವ ಆಚರಿಸುವ ಮುಖ್ಯ ಉದ್ದೇಶ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದಾಗಿದೆ. ಪರಿಸರದ ಅಸಮತೋಲನ ಉಂಟಾದ ಕಾರಣ ಹಲವು ಕಡೆಗಳಲ್ಲಿ ಅನಾಹುತಗಳನ್ನು ಉಂಟಾಗುತ್ತಿದೆ. ಈ ವರ್ಷ ಕರ್ನಾಟಕ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ತಾಪಮಾನದಲ್ಲಿ ಹೆಚ್ಚಳ ಉಂಟಾಗಿರುವುದಕ್ಕೆ ಪರಿಸರವೇ ಕಾರಣ ಎಂದರು.
ಈ ವರ್ಷದ ಪರಿಸರ ದಿನಾಚರಣೆಯ ದ್ಯೇಯ ವಾಕ್ಯ “ಏಕ್ ಪೇಡ್ ಮಾ ಕೆ ನಾಮ್’ ಎಂದಾಗಿದೆ. ತಾಯಿಯ ಹೆಸರಲ್ಲಿ ಒಂದು ಮರವನ್ನು ನೆಟ್ಟು ಬೆಳೆಸುವುದು ಈ ಧ್ಯೇಯವಾಕ್ಯದ ಉದ್ದೇಶವಾಗಿದೆ. ಆದ್ದರಿಂದ ಮನೆಯ ಹಿತ್ಲು, ಜಮೀನಿನ ಬದುವು ಇಲ್ಲವೆ ಸರ್ಕಾರಿ ಜಾಗ ಎಲ್ಲಿ ಸಾಧ್ಯವಾಗುತ್ತದೆ ಅಲ್ಲಿ ಒಂದು ಗಿಡವನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ವಲಯ ಅರಣ್ಯ ಅಧಿಕಾರಿ ಶರತ್ ಶೆಟ್ಟಿ, ಭಟ್ಕಳ ತಾಲೂಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಉಪಾಧ್ಯಕ್ಷ ಮೋಹನ್ ನಾಯ್ಕ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರಾಧಕೃಷ್ಣ ಭಟ್, ಪತ್ರಕರ್ತರಾದ ಸತೀಶಕುಮಾರ್ ನಾಯ್ಕ, ವಸಂತ ದೇವಾಡಿಗ, ವಿಷ್ಣ ದೇವಾಡಿಗ, ನಸೀಮುಲ್ ಗನಿ ಶಾಬಂದ್ರಿ, ಫಯಾಝ್ ಮುಲ್ಲಾ, ಸೇರಿದಂತೆ ವಿವಿಧ ಹಂತದ ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.